ಬೆಕ್ಕು ದಾರಿಗಡ್ಡ ಬಂದಾಗ

ಈ ಚಿತ್ರವನ್ನು ಕಂಡಾಗ ಎಲ್ಲೋ ಓದಿದ ಒಂದು ಕಥೆ ನೆನಪಿಗೆ ಬಂತು. ಹಾಗೆ ಒಂದೆರಡು ಪ್ರಶ್ನೆಗಳೂ


ಗೆಳೆಯರಿಬ್ಬರು ಪ್ರವಾಸ ಹೊರಟಿದ್ದರು.ಒಬ್ಬ ಮಹಾ ಭಕ್ತ. ಮತ್ತೊಬ್ಬ ನಾಸ್ತಿಕ. ಹಾದಿಯಲ್ಲಿ ಒಂದು ಬೆಕ್ಕು ಅವರಿಗೆ ಅಡ್ಡ ಬಂತು. ಭಕ್ತನಿಗೋ ಆತಂಕ. ಇದು ಕೆಟ್ಟ ಶಕುನ ಎಂದ ಆತ ಮುಂದೆ ಹೋಗದೆ ಅಲ್ಲೇ ನಿಂತ. ಅವನಿಗೆ ಸಮಾಧಾನ ಮಾಡುವುದಕ್ಕೆ ನಾಸ್ತಿಕನೇ ಮುಂದೆ ಹೊಇಗಿ, ಬೆಕ್ಕು ದಾಟಿದ ಹಾದಿಯನ್ನು ಮೀರಿ ಮುಂದೆ ನಡೆದ. ಬೆಕ್ಕು ಎಡದಿಂದ ಬಲಕ್ಕೆ ಹಾಯ್ದರೆ ಮಾತ್ರ ಅಪಶಕುನ ಎಂದ. ಅದಕ್ಕೆ ಒಪ್ಪಿದ ಭಕ್ತ ಪ್ರಯಾಣ ಮುಂದುವರೆಸಿದ.

ಇನ್ನಷ್ಟು ದೂರ ಹೋಗಿರಬಹುದು. ಭಕ್ತ ಕಲ್ಲೊಂದನ್ನು ಎಡವಿ ಬಿದ್ದ. ಕಾಲಿಗೆ ಪೆಟ್ಟಾಗಿ ರಕ್ತ ಸುರಿಯಲು ಆರಂಭಿಸಿತು. ಅಲ್ಲೇ ಕುಳಿತು ಅದಕ್ಕೊಂದು ಪಟ್ಟಿ ಕಟ್ಟಿದ. ಬೆಕ್ಕು ಅಡ್ಡ ಬಂದಿದ್ದರಿಂದಲೇ ಹೀಗಾಗಿರಬೇಕು ಎಂದು ಆತಂಕಿಸಿದ. 


ನಾಸ್ತಿಕ ನಕ್ಕು, ಅದೇ ಹಾದಿಯಲ್ಲಿ ಬರುವ ಇತರರಿಗೆ ತೊಂದರೆಯಾಗದಿರಲಿ ಎಂದು ಹಾದಿಗೆ ಅಡ್ಡವಾಗಿದ್ದ ಕಲ್ಲನ್ನು ಕಿತ್ತೆಸೆದ. ಕಲ್ಲು ಕೈಗೆ ಬಂದ ಮೇಲೆ ನೋಡಿದರೆ ಹೊಳೆಯುತ್ತಿತ್ತು. ಅದೊಂದು ಅಮೂಲ್ಯವಾದ ರತ್ನ. ಖುಷಿಯಿಂದ ಚೀಲಕ್ಕೆ ಹಾಕಿಕೊಂಡ.

ಹೀಗೇ ಅವರ ಪಯಣ ಮುಂದುವರೆಯಿತು. ಭಕ್ತನಿಗೋ ಹೊಟ್ಟೆಯುರಿ. ಬೆಕ್ಕು ಅಡ್ಡ ಬಂದಿದ್ದರೂ ನಾಸ್ತಿಕನಿಗೆ ವಜ್ರ ಸಿಕ್ಕಿತಲ್ಲ. ತನಗೆ ಕಾಲಿಗೆ ಗಾಯವಷ್ಟೆ ಸಿಕ್ಕಿತಲ್ಲ. ಹೀಗೆಂದು ಹೊಟ್ಟೆ ಉರಿದುಕೊಂಡ. ಎಲ್ಲಿಯಾದರೂ ಸಮಯ ಸಿಕ್ಕರೆ ಅದನ್ನುಬಕದ್ದು ತನ್ನದಾಗಿಸಿಕೊಳ್ಳಬೇಕು ಎಂದೂ ಯೋಚಿಸಿದ.


ಸ್ವಲ್ಪ ದೂರ ಕಳೆದ ಮೇಲೆ ಸುಂಕದ ಕಟ್ಟೆ ಬಂತು. ಅಲ್ಲಿದ್ದ ಅಧಿಕಾರಿಗಳು ಇಬ್ಬರ ಚೀಲವನ್ನೂ ಪರಿಶೀಲಿಸಿದರು. ನಾಸ್ತಿಕನ ಚೀಲದಲ್ಲಿದ್ದ ವಜ್ರವನ್ನು ನೋಡಿ ಕಳ್ಳ ಎಂದು ಬಂಧಿಸಿದರು. ಬೆಳಗ್ಗೆ ಅದೇ ಹಾದಿಯಲ್ಲಿ ಮೆರವಣಿಗೆ ಹೋದ ರಾಜನ ಕಿರೀಟದಿಂದ ರತ್ನ  ಕಳೆದು ಹೋಗಿತ್ತಂತೆ. 


ಎಷ್ಟು ಹೇಳಿದರೂ ಕೇಳದೆ ನಾಸ್ತಿಕನನ್ನು ಸೆರೆಮಬೆಗೆ ದೂಡಿದರು. ಭಕ್ತ ಆಗ ನಿಟ್ಟುಸಿರು ಬಿಟ್ಟು ಯಾರ ಮುಖ ನೋಡಿದ್ದೆನೋ ಬದುಕಿದೆ ಎಂದ. ಬೆಕ್ಕು ಅಡ್ಡಿಯಾಗಿದ್ದು ಮರೆತೇ ಹೋಗಿತ್ತು.

—–

ಆತಂಕ ಮನಸ್ಸಿನ ಸ್ಥಿತಿ. ಬೆಕ್ಕಿನ ಕಣ್ಣು ಭಯಾನಕವೇನೋ ನಿಜ. ಅದೇ ರೀತಿಯ ಕಣ್ಣಿರುವ ಹುಲಿಯೂ ಅಪಶಕುನವೋ?  ಈಚಿನ ದಿನಗಳಲ್ಲಿ ಹುಲಿ ದಾರಿಗೆ ಅಡ್ಡ ಬರುವುದಿಲ್ಲ ನಿಜ. ಆದರೆ ಈ ನಂಬಿಕೆ ಆರಂಭವಾದ ದಿನಗಳಲ್ಲಿ ಇದ್ದಿರಬಹುದು ಎಂದಿರಾ? 


ಹಾಗಿದ್ದರೆ ಸಾಕಿದ ಬೆಕ್ಕು ಅಪಶಕುನವಲ್ಲವೇ? ಏಕೆಂದರೆ ಅದನ್ನು ಕಂಡು ನಾವು ಭಯಪಡುವುದಿಲ್ಲವಲ್ಲ!


ಎಲ್ಲ ನಂಬಿಕೆಗಳಿಗೂ ವೈಜ್ಞಾನಿಕ ಕಾರಣಗಳಿರಬೇಕಿಲ್ಲ. ಭಯ, ಅನುಕರಣೆಯೂ ಕೆಲವು ಆಚರಣೆಗಳಿಗೆ ಕಾರಣ.

ನಿಮ್ಮ ಟಿಪ್ಪಣಿ ಬರೆಯಿರಿ