ಸಂಜೆಯಾದ ಮೇಲೆ ಉಗುರು ಕತ್ತರಿಸಬಾರದು

ಇದಕ್ಕೆ ವೈಜ್ಞಾನಿಕ ಎಂದು ಕೊಡುವ ಕಾರಣ: ಮಸುಕು ಬೆಳಕಿನಲ್ಲಿ ಉಗುರು ಕತ್ತರಿಸುವಾಗ ಕಾಣದೆ ಗಾಯವಾಗಬಹುದು

ಈಗ ಎಲ್ಲ ಕಡೆಯೂ ಹಗಲಿಗಿಂತ ಹೆಚ್ಚು ಬೆಳಕು ಮನೆಯೊಳಗೆ ದೊರಕಿಸುವ ವಿದ್ಯುತ್ ದೀಪಗಳು ಇರುವಾಗ ಇದನ್ನು ವೈಜ್ಞಾನಿಕ ಎನ್ನುವುದು ಸರಿಯೇ?

ಹಾಗೆಯೇ ಶುಕ್ರವಾರ, ಮಂಗಳವಾರ ಕತ್ತರಿಸಬಾರದು ಎನ್ನುವವರೂ ಇದ್ದಾರೆ. ಏಕೆ? ಆ ದಿನಗಳಲ್ಲಿ ಉಗುರು ಬೆಳೆಯುವುದಿಲ್ಲವೇ? ವಾಸ್ತವವಾಗಿ ಪ್ರತಿ ದಿನವೂ ಉಗುರು ಬೆಳೆಯುತ್ತಲೇ ಇರುತ್ತದೆ. 

ಒಂದು ವೇಳೆ ಇಲಿಯೂ ನಮ್ಮಂತೆ ಯೋಚಿಸುತ್ತಿದ್ದಿದ್ದರೆ ಏನಾಗುತ್ತಿತ್ತು ಎಂದು ಊಹಿಸಿದರೆ ನಗು ಬರುತ್ತದೆ. ಇಲಿಯ ಹಲ್ಲುಗಳು ಬಲು ವೇಗವಾಗಿ ಬೆಳೆಯುತ್ತವೆ. ಆ ಕಾರಣದಿಂದಾಗಿಯೇ ಅದು ಸದಾ ಏನನ್ನಾದರೂ ಕಚ್ಚುತ್ತಲೇ ಇರಬೇಕು. ಬೆಳೆಯುವ ಹಲ್ಲುಗಳನ್ನು ಸವೆಸಬೇಕು.

ಇಲಿಯೂ ನಮ್ಮ ಹಾಗೆ ವಾರ, ಸಮಯವನ್ನು ಲೆಕ್ಕ ಹಾಕಿ ಹಲ್ಲು ಸವೆಸಲು ಪ್ರಯತ್ನಿಸಿದ್ದರೆ ಅದರ ಬದುಕು ಖಂಡಿತ ಕಷ್ಟಕರವಾಗಿರುತ್ತಿತ್ತು.😀

ಬಸುರಿಯರು ಸೂರ್ಯಗ್ರಹಣದ ಸಮಯದಲ್ಲಿ ಹೊರಗೆ ಅಡ್ಡಾಡಬಾರದು

ಇದಕ್ಕೆ ವೈಜ್ಞಾನಿಕ ಎಂದು ಕೊಡುವ ಕಾರಣ ಹೀಗಿದೆ. ಆ ಸಮಯದಲ್ಲಿ ಸೂರ್ಯನಿಂದ ಬರುವ ಕಿರಣಗಳಲ್ಲಿ ಅಲ್ಟ್ರಾವಯಲೆಟ್ (ನೇರಳಾತೀತ) ಕಿರಣಗಳ ಪ್ರಮಾಣ ಹೆಚ್ಚಿರುವುದರಿಂದ ಅಪಾಯ ಎಂದು ಕಾರಣ ನೀಡಲಾಗುತ್ತದೆ.

ಇದು ನಿಜವೇ?

ಸೂರ್ಯ ಗ್ರ ಹಣದ ಸಮಯದಲ್ಲಿ ಚಂದ್ರ ಅಡ್ಡ ಬರುವುದರಿಂದ ನೆರಳಾಗುತ್ತದೆ. ಇಲ್ಲಿ ಗಮನಿಸಬೇಕಾದ ವಿಷಯ ಅಂದರೆ ದೀಪಕ್ಕೆ ಅಡ್ಡವಾಗಿ ಕಾಗದವನ್ನು ಹಿಡಿದರೆ ಹೇಗೆ ಬೆಳಕಿನ ಜೊತೆಗೆ ದೀಪದಿಂದ ಬರುವ ಶಾಖವೂ ಕಡಿಮೆ ಆಗುತ್ತದೆಯೋ ಹಾಗೆಯೇ ನೇರಳಾತೀತ ಕಿರಣವೂ ಕಡಿಮೆ ಆಗುತ್ತದೆ.  ಹತ್ತು ಕಲ್ಲು ಇರುವ ಅಕ್ಕಿಯಲ್ಲಿ ಅಕ್ಕಿಯನ್ನೆಲ್ಲಾ ಆಯ್ದಾಗ ಉಳಿವ ಅದೇ ಹತ್ತು ಕಲ್ಲಿನ ಪ್ರಮಾಣ ಹೆಚ್ಚಾಗಿ ತೋರುತ್ತದಷ್ಟೆ. ಇಲ್ಲಿಯೂ ಹಾಗೆಯೇ ದೃಗ್ಗೋಚರ ಬೆಳಕು ಮಸುಕಾದಾಗ ಉಳಿದ ಕಿರಣಗಳು ಹೆಚ್ಚಾದಂತೆ ತೋರುತ್ತವೆಯೇ ಹೊರತು ಭೂಮಿಗೆ ಬಂದು ಬೀಳುವ ಕಿರಣಗಳ ಪ್ರಮಾಣದಲ್ಲಿ ಹೆಚ್ಚು ಕಡಿಮೆ ಆಗುವುದಿಲ್ಲ.

ಅಂದರೆ, ಈ ನಂಬಿಕೆ ಸತ್ಯವಾದರೆ ನಿತ್ಯದ ಬೆಳಗಿನಲ್ಲೂ ಬಸುರಿಯರಿಗೆ ನೇರಳಾತೀತ ಕಿರಣಗಳು ಬಡಿಯುತ್ತಲೇ ಇರುತ್ತವೆ. 

ಹಾಗಿದ್ದರೆ ನಿತ್ಯವೂ ಇಲ್ಲದ ಭಯ ಗ್ರಹಣದ ವೇಳೆ ಏಕೆ?

ಇದು ಮಾನವನ ಮನಸ್ಸು ಹಾಗೂ ತಿಳುವಳಿಕೆಗೆ ಸಂಬಂಧಿಸಿದ್ದು. ನಿತ್ಯವೂ ಹಗಲು ಬೆಳಗುವ ಸೂರ್ಯ ಹಗಲೇ ಕರಿಯಾಗಲು ಕಾರಣ ಗೊತ್ತಿಲ್ಲದಾಗ ಭಯ ಉಂಟಾಗುತ್ತದೆ. ಇದುವೇ ಗ್ರಹಣದ ಬಗ್ಗೆ ಇರುವ ಹಲವು ನಂಬಿಕೆಗಳಿಗೆ ಕಾರಣ ಇರಬಹುದು.

ಗ್ರಹಣದ ಸಮಯದಲ್ಲಿ ತಾಕುವುದಕ್ಕಿಂತಲೂ ಪ್ರಖರವಾದ ಶಕ್ತಿ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮಾಡಿಸಿದಾಗ ದೇಹವಮ್ನು ತಾಕುತ್ತವೆ. ಬಸುರಿಯರು ಇದನ್ನು ನಿಲ್ಲಿಸಿದ್ದಾರೆಯೇ? ಆಗಿಲ್ಲದ ಭಯ ಗ್ರಹಣದ ವೇಳೆ ಏಕೆ? 

ಮುಸ್ಸಂಜೆ ಆದ ಮೇಲೆ ಕಸ ಗುಡಿಸಬಾರದೇ?

ಮುಸ್ಸಂಜೆ ಆದ ಮೇಲೆ ಕಸ ಗುಡಿಸಿದರೆ ದುರಾದೃಷ್ಟ ಬರುತ್ತದಂತೆ.

ಹೌದೇ? ಇದಕ್ಕೆ ಕೊಡುವ ಕಾರಣ: ರಾತ್ರಿ ಕತ್ತಲಲ್ಲಿ ಅಮೂಲ್ಯವಾದ ವಸ್ತುಗಳನ್ನು ಗುಡಿಸಿ ಬಿಸಾಡಬಹುದು ಎನ್ನುವ ಕಾರಣಕ್ಕೆ ಹೀಗೆ ಮಾಡಬಾರದಂತೆ.
ಈ ಮಾತು ಕೇಳಿದಾಗ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಏಳುತ್ತವೆ.

ನೆಲದಲ್ಲಿ ಇಡುವಂತಹ ಅಮೂಲ್ಯ ವಸ್ತುಗಳು ಯಾವುವು?

ಸಾಮಾನ್ಯವಾಗಿ ನೆಲದಲ್ಲಿ ಬಿದ್ದ ಮುತ್ತು, ನತ್ತು, ಗಾಜಿನ ಚೂರು ಇತ್ಯಾದಿ ಸಣ್ಣ ವಸ್ತುಗಳನ್ನು ಹುಡುಕಲು ಮತ್ತು ಹೆಕ್ಕಲು ಕಸಬರಿಕೆಯಿಂದ ಗುಡಿಸುವುದು ವಾಡಿಕೆ. ಹಾಗಿದ್ದ ಮೇಲೆ ಈ ತರ್ಕ ವಿಚಿತ್ರ ಅನಿಸುತ್ತದೆ. ಏನಾದರೂ ಬಿದ್ದಿದ್ದಲ್ಲಿ ಅದನ್ನು ಒಂದೆಡೆ ಗುಡಿಸಿಟ್ಟರೆ ಹುಡುಕುವುದು ಸರಾಗ ಅಲ್ಲವೇ?

ಮೂರನೆಯದಾಗಿ ಈ ನಂಬಿಕೆ ಎಲ್ಲ ಕಡೆಯೂ ಇದೆಯೋ? ಸಾಂಪ್ರದಾಯಿಕವಾಗಿ ಅಟ್ಟಣಿಗೆಗಳ ಮೇಲೆ ವಾಸವಿರುವವರೂ ಸಂಜೆ ಆದ ಮೇಲೆ ಗುಡಿಸಬಾರದು ಎನ್ನುವರೋ?

ಅಂದ ಹಾಗೆ ಗುಡಿಸುವುದರ ಬಗ್ಗೆ ಇನ್ನೂ ಬೇರೆ ನಂಬಿಕೆಗಳು ಇವೆಯೋ? ಯಾರಿಗಾದರೂ ಗೊತ್ತಿದ್ದಲ್ಲಿ ಕಮೆಂಟು ಹಾಕಿ.

ಕೆಲವೊಮ್ಮೆ ಯಾವುದೋ ಸಂದರ್ಭದಲ್ಲಿ ತೊಡಗಿದ ಆಚರಣೆಯನ್ನು ಎಲ್ಲರೂ ಅವಶ್ಯಕವಿಲ್ಲದಿದ್ದರೂ ಅನುಕರಿಸುವುದೂ ಉಂಟು.

ಕಂಪ್ಯೂಟರಿಗೂ ಆಯುಧಪೂಜೆಯಲ್ಲಿ ಪೂಜಿಸುವುದು ಇಂತಹ ಅನುಕರಣಾ ವಿಧಿಗಳಿಗೆ ಉದಾಹರಣೆ.

ಆಯುಧಗಳಿರುವ ಎಲ್ಲರೂ ಆಯುಧಪೂಜೆಯನ್ನು ಆಚರಿಸುವುದಿಲ್ಲವಾದ್ದರಿಂದ ಇದು ವೈಜ್ಞಾನಿಕ ಕಾರಣಗಳಿಗಾಗಿ ಅಲ್ಲ ಎನ್ನುವುದು ಸ್ಪಷ್ಟ. 

ಬೆಕ್ಕು ದಾರಿಗಡ್ಡ ಬಂದಾಗ

ಈ ಚಿತ್ರವನ್ನು ಕಂಡಾಗ ಎಲ್ಲೋ ಓದಿದ ಒಂದು ಕಥೆ ನೆನಪಿಗೆ ಬಂತು. ಹಾಗೆ ಒಂದೆರಡು ಪ್ರಶ್ನೆಗಳೂ


ಗೆಳೆಯರಿಬ್ಬರು ಪ್ರವಾಸ ಹೊರಟಿದ್ದರು.ಒಬ್ಬ ಮಹಾ ಭಕ್ತ. ಮತ್ತೊಬ್ಬ ನಾಸ್ತಿಕ. ಹಾದಿಯಲ್ಲಿ ಒಂದು ಬೆಕ್ಕು ಅವರಿಗೆ ಅಡ್ಡ ಬಂತು. ಭಕ್ತನಿಗೋ ಆತಂಕ. ಇದು ಕೆಟ್ಟ ಶಕುನ ಎಂದ ಆತ ಮುಂದೆ ಹೋಗದೆ ಅಲ್ಲೇ ನಿಂತ. ಅವನಿಗೆ ಸಮಾಧಾನ ಮಾಡುವುದಕ್ಕೆ ನಾಸ್ತಿಕನೇ ಮುಂದೆ ಹೊಇಗಿ, ಬೆಕ್ಕು ದಾಟಿದ ಹಾದಿಯನ್ನು ಮೀರಿ ಮುಂದೆ ನಡೆದ. ಬೆಕ್ಕು ಎಡದಿಂದ ಬಲಕ್ಕೆ ಹಾಯ್ದರೆ ಮಾತ್ರ ಅಪಶಕುನ ಎಂದ. ಅದಕ್ಕೆ ಒಪ್ಪಿದ ಭಕ್ತ ಪ್ರಯಾಣ ಮುಂದುವರೆಸಿದ.

ಇನ್ನಷ್ಟು ದೂರ ಹೋಗಿರಬಹುದು. ಭಕ್ತ ಕಲ್ಲೊಂದನ್ನು ಎಡವಿ ಬಿದ್ದ. ಕಾಲಿಗೆ ಪೆಟ್ಟಾಗಿ ರಕ್ತ ಸುರಿಯಲು ಆರಂಭಿಸಿತು. ಅಲ್ಲೇ ಕುಳಿತು ಅದಕ್ಕೊಂದು ಪಟ್ಟಿ ಕಟ್ಟಿದ. ಬೆಕ್ಕು ಅಡ್ಡ ಬಂದಿದ್ದರಿಂದಲೇ ಹೀಗಾಗಿರಬೇಕು ಎಂದು ಆತಂಕಿಸಿದ. 


ನಾಸ್ತಿಕ ನಕ್ಕು, ಅದೇ ಹಾದಿಯಲ್ಲಿ ಬರುವ ಇತರರಿಗೆ ತೊಂದರೆಯಾಗದಿರಲಿ ಎಂದು ಹಾದಿಗೆ ಅಡ್ಡವಾಗಿದ್ದ ಕಲ್ಲನ್ನು ಕಿತ್ತೆಸೆದ. ಕಲ್ಲು ಕೈಗೆ ಬಂದ ಮೇಲೆ ನೋಡಿದರೆ ಹೊಳೆಯುತ್ತಿತ್ತು. ಅದೊಂದು ಅಮೂಲ್ಯವಾದ ರತ್ನ. ಖುಷಿಯಿಂದ ಚೀಲಕ್ಕೆ ಹಾಕಿಕೊಂಡ.

ಹೀಗೇ ಅವರ ಪಯಣ ಮುಂದುವರೆಯಿತು. ಭಕ್ತನಿಗೋ ಹೊಟ್ಟೆಯುರಿ. ಬೆಕ್ಕು ಅಡ್ಡ ಬಂದಿದ್ದರೂ ನಾಸ್ತಿಕನಿಗೆ ವಜ್ರ ಸಿಕ್ಕಿತಲ್ಲ. ತನಗೆ ಕಾಲಿಗೆ ಗಾಯವಷ್ಟೆ ಸಿಕ್ಕಿತಲ್ಲ. ಹೀಗೆಂದು ಹೊಟ್ಟೆ ಉರಿದುಕೊಂಡ. ಎಲ್ಲಿಯಾದರೂ ಸಮಯ ಸಿಕ್ಕರೆ ಅದನ್ನುಬಕದ್ದು ತನ್ನದಾಗಿಸಿಕೊಳ್ಳಬೇಕು ಎಂದೂ ಯೋಚಿಸಿದ.


ಸ್ವಲ್ಪ ದೂರ ಕಳೆದ ಮೇಲೆ ಸುಂಕದ ಕಟ್ಟೆ ಬಂತು. ಅಲ್ಲಿದ್ದ ಅಧಿಕಾರಿಗಳು ಇಬ್ಬರ ಚೀಲವನ್ನೂ ಪರಿಶೀಲಿಸಿದರು. ನಾಸ್ತಿಕನ ಚೀಲದಲ್ಲಿದ್ದ ವಜ್ರವನ್ನು ನೋಡಿ ಕಳ್ಳ ಎಂದು ಬಂಧಿಸಿದರು. ಬೆಳಗ್ಗೆ ಅದೇ ಹಾದಿಯಲ್ಲಿ ಮೆರವಣಿಗೆ ಹೋದ ರಾಜನ ಕಿರೀಟದಿಂದ ರತ್ನ  ಕಳೆದು ಹೋಗಿತ್ತಂತೆ. 


ಎಷ್ಟು ಹೇಳಿದರೂ ಕೇಳದೆ ನಾಸ್ತಿಕನನ್ನು ಸೆರೆಮಬೆಗೆ ದೂಡಿದರು. ಭಕ್ತ ಆಗ ನಿಟ್ಟುಸಿರು ಬಿಟ್ಟು ಯಾರ ಮುಖ ನೋಡಿದ್ದೆನೋ ಬದುಕಿದೆ ಎಂದ. ಬೆಕ್ಕು ಅಡ್ಡಿಯಾಗಿದ್ದು ಮರೆತೇ ಹೋಗಿತ್ತು.

—–

ಆತಂಕ ಮನಸ್ಸಿನ ಸ್ಥಿತಿ. ಬೆಕ್ಕಿನ ಕಣ್ಣು ಭಯಾನಕವೇನೋ ನಿಜ. ಅದೇ ರೀತಿಯ ಕಣ್ಣಿರುವ ಹುಲಿಯೂ ಅಪಶಕುನವೋ?  ಈಚಿನ ದಿನಗಳಲ್ಲಿ ಹುಲಿ ದಾರಿಗೆ ಅಡ್ಡ ಬರುವುದಿಲ್ಲ ನಿಜ. ಆದರೆ ಈ ನಂಬಿಕೆ ಆರಂಭವಾದ ದಿನಗಳಲ್ಲಿ ಇದ್ದಿರಬಹುದು ಎಂದಿರಾ? 


ಹಾಗಿದ್ದರೆ ಸಾಕಿದ ಬೆಕ್ಕು ಅಪಶಕುನವಲ್ಲವೇ? ಏಕೆಂದರೆ ಅದನ್ನು ಕಂಡು ನಾವು ಭಯಪಡುವುದಿಲ್ಲವಲ್ಲ!


ಎಲ್ಲ ನಂಬಿಕೆಗಳಿಗೂ ವೈಜ್ಞಾನಿಕ ಕಾರಣಗಳಿರಬೇಕಿಲ್ಲ. ಭಯ, ಅನುಕರಣೆಯೂ ಕೆಲವು ಆಚರಣೆಗಳಿಗೆ ಕಾರಣ.

ಕ್ರಿಪ್ಟಾನು

ವಿಲಿಯಂ ರಾಮ್ಸೇ ನಿನ್ನ ಶೋಧಕ

ಅದಕಾಗಿಯೇ ಪಡೆದ ನೋಬೆಲ್ ಪದಕ

ವಾಸನೆ, ಬಣ್ಣ, ರುಚಿ ಇಲ್ಲದ ವಿರಾಗಿ

ಮೀಟರು ವ್ಯಾಖ್ಯಾನಿಸಲು ಆಧಾರವಾದೆ

ದಶಕಗಳಿಗೂ ಮಿಗಿಲಾಗಿ

ಶರವೇಗದ ಛಾಯಾಗ್ರಹಣಕೆ ಬಲು ಉಪಯೋಗಿ.

ಚನ್ನಮಲ್ಲಸ್ವಾಮಿ

ಹಲ್ಲಿ ಮೈಮೇಲೆ ಬಿದ್ದರೆ ದುರಾದೃಷ್ಟವೇ?

ಇಗೋ. ಹಲ್ಲಿ ಮೈಯಲ್ಲಿ ವಿಷ ಪದಾರ್ಥಗಳು ಇರುವುದರಿಂದ ಹಾಗೆ ಹೇಳಲಾಗುತ್ತದೆ ಎಂದು ಈ ನಂಬಿಕೆಗೆ ಸಮಜಾಯಿಷಿ ನೀಡಲಾಗುತ್ತದೆ.

ಇದು ನಿಜವೇ ಆದರೆ ಸೊಳ್ಳೆ, ಜಿರಲೆ, ಜೇಡಗಳಂತಹ ಜೀವಿಗಳು ಮೈ ಮೇಲೆ ಬಿದ್ದಾಗಲೂ ದುರಾದೃಷ್ಟ ಎಂದು ಹಳಿಯಬೇಕಿತ್ತು? ಹಾಗೇಕಿಲ್ಲ?

ವಾಸ್ತವವಾಗಿ ಮನೆಯ ಹಲ್ಲಿ ವಿಷಕಾರಿಯೇ ಅಲ್ಲ. ಹಾಗಿದ್ದ ಮೇಲೆ ಈ ನಂಬಿಕೆ ತಪ್ಪಲ್ಲವೇ?

ಇದು ಹಲ್ಲಿಯಂತಹ ಜೀವಿಗಳ ಬಗ್ಗೆ ಅರಿವಿಗಿಂತ ಭಯ ಹೆಚ್ಚಾಗಿರುವುದರಿಂದ ಹುಟ್ಟಿದ ಮೌಢ್ಯವಷ್ಟೆ. 

ಎಲ್ಲ ಆಚರಣೆಗಳಿಗೂ, ಎಲ್ಲ ನಂಬಿಕೆಗಳಿಗೂ ಕಾರಣ, ವೈಜ್ಞಾನಿಕ ಬುನಾದಿ ಇರಬೇಕಿಲ್ಲ.

ಕೊಳ್ಳೇಗಾಲ ಶರ್ಮ